Tuesday, August 16, 2011

ಗಾಯಕ್ವಾಡ್ ಗೆ ಹರ್ಷ ತಂದ ವಿಮಾನಯಾನ ಪ್ರಸ್ತಾಪ

ವಿಮಾನ ಪ್ರಯಾಣಕ್ಕೆ ಸಂಪೂರ್ಣ ಸಹಮತ - ತಂಡ ಸೇರಿದ ಗಾಯಕ್ವಾಡ್

ಹಿಂದಿನ ದಿನದ ಸಭೆಯಲ್ಲಿ ಚರ್ಚಿತವಾದ ವಿಷಯಗಳನ್ನು ೨೯ ಜುಲೈ ರಂದು ಕಛೇರಿಗೆ ಹಾಜರಾದ ಕೂಡಲೇ ಸುಬ್ರಹ್ಮಣ್ಯ ಮತ್ತು ಗಾಯಕ್ವಾಡ್ ಇವರ ಸಮ್ಮುಖದಲ್ಲಿ ಚರ್ಚಿಸಿದೆ. ಆರಂಭದಲ್ಲಿ ಸುಬ್ಬಣ್ಣ ನಾಟಕೀಯ ಪ್ರತಿರೋಧ ತೋರಿದನಾದರೂ ನಂತರ ಹಸನ್ಮುಖನಾಗಿ ಸಮ್ಮತಿ ಸೂಚಿಸಿದನು. ರೈಲ್ ನಲ್ಲಿ ಪ್ರಯಾಣಿಸುವುದಾಗಿ ತಿಳಿಸಿದಾಗಲೂ ಅಷ್ಟು ಖುಷಿಯಾಗದ ಗಾಯಕ್ವಾಡ್ ವಿಮಾನ ಪ್ರಯಾಣ ಎಂದ ಕೂಡಲೇ "ವಾವ್!" ಎಂಬ ಹರ್ಷೋದ್ಗಾರದೊಂದಿಗೆ "ನಾನೂ ಕೂಡ ನಮ್ಮ ಇಡೀ ಪರಿವಾರದೊಂದಿಗೆ ಈ ಪ್ರವಾಸಕ್ಕೆ ಬರುತ್ತೇನೆ" ಎಂದು ತಮ್ಮ ಸದಸ್ಯತ್ವವನ್ನು ಖಾಯಂಗೊಳಿಸಿದರು. ಇದೇ ವಿಷಯವನ್ನು ನಾನು ಶೈಲಾ, ವಿದ್ಯಾ ಮತ್ತು ಬೆಟ್ಟಪ್ಪ ಅವರಲ್ಲಿ ಚರ್ಚಿಸಿದಾಗ ಅವರೂ ಕೂಡ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದರು. ಇದನ್ನು ನಾನು ಪ್ರವಾಸದ ಪ್ರತಿಯೊಬ್ಬ ಸದಸ್ಯರಿಗೂ ತಿಳಿಸಿ ಎಲ್ಲರ ಸಹಮತ ಪಡೆದು ವಿಮಾನದ ಸಂಪೂರ್ಣ ವಿವರ ಸಂಗ್ರಹಣಾ ಕಾರ್ಯಕ್ಕೆ ಚಾಲನೆ ಕೊಟ್ಟಿ. ವಿಮಾನ ದರದ ಬಗ್ಗೆ ತಿಳಿಯಲು ಅಂತರ್ಜಾಲದಲ್ಲಿ ಜಾಲಾಡಿದಾಗ ತಿಳಿದುಬಂದದ್ದು ಬೆಂಗಳೂರಿನಿಂದ ಹೈದರಾಬಾದ್ ಗೆ ರೂ.೧,೫೩೦/- ಮತ್ತು ಹೈದರಾಬಾದ್ ಇಂದ ಬೆಂಗಳೂರಿಗೆ ರೂ.೧,೭೮೦/-. ಇದರಿಂದಾಗಿ ನಾನು ಹೋಗುವಾಗ ವಿಮಾನ ಮತ್ತು ಬರುವಾಗ ರೈಲು ಎಂಬ ಪ್ರಸ್ತಾಪವನ್ನು ಬಿಡುವಿನ ಸಮಯದಲ್ಲಿ ಸಭಿಕರ ಮುಂದೆ ಇಟ್ಟಾಗ ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಿದರು. ಆದರೆ ಗಾಯಕ್ವಾಡ್ ಮತ್ತು ಸುಬ್ಬಣ್ಣ ಮಾತ್ರ ಬರುವಾಗ ವಿಮಾನದಲ್ಲಿ ಬರುವುದು ಸೂಕ್ತ ಯಾಕೆಂದರೆ ಪ್ರವಾಸದ ಆಯಾಸವನ್ನೆಲ್ಲಾ ವಿಮಾನಯಾನ ದಲ್ಲಿ ತೀರಿಸಿಕೊಳ್ಳಬಹುದು ಮತ್ತು ಬಹುಬೇಗನೇ ಮನೆ ತಲುಪಿ ಮತ್ತಷ್ಟು ವಿರಾಮ ಪಡೆದು ಮರುದಿನದ ಕಛೇರಿ ಕಾರ್ಯಕ್ಕೆ ನಿರಾಯಾಸವಾಗಿ ಆಗಮಿಸಬಹುದು ಎಂದು. ಆದರೆ ನನ್ನ ವಾದವೇನಿತ್ತೆಂದರೆ, ಹೋಗುವಾಗ ವಿಮಾನದಲ್ಲಿ ಹೋಗುವುದಾದರೆ ರೂ.೨೫೦/- ಖರ್ಚು ಕಡಿಮೆಯಾಗುತ್ತದೆ ಅಲ್ಲದೇ ನಾವು ೫ನೇ ತಾರೀಖಿನ ಸಂಜೆ ಹೈದರಾಬಾದ್ ತಲುಪುವುದರಿಂದ, ದೀರ್ಘವಿರಾಮದೊಂದಿಗೆ ಮರುದಿನದ ನಮ್ಮ ಪ್ರವಾಸಿ ತಾಣಗಳ ಭೇಟಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತದೆ ಮತ್ತು ಸಮಯಾವಕಾಶ ಸಾಕಷ್ಟು ಇರುತ್ತದೆ ಎಂದೆ. ಇದನ್ನು ಎಲ್ಲರೂ ಒಪ್ಪಿ ಮುಂದಿನ ಕಾರ್ಯಗಳನ್ನು ಶುರುಮಾಡುವಂತೆ ನನಗೆ ಸೂಚಿಸಿದರು.

No comments:

Post a Comment