Sunday, August 14, 2011

ವಿಮಾನಯಾನ ಮತ್ತು ಪ್ರವಾಸಕ್ಕೆ ವಿಕಾಸ್

ವಿಮಾನ ಪ್ರಯಾಣದ ಪ್ರಸ್ತಾಪ ಮತ್ತು ಪ್ರವಾಸಕ್ಕೆ ವಿಕಾಸ್ ರವರ ಹಾಜರಿ
೨೮-ಜುಲೈ-೨೦೧೧ ರ ಸಂಜೆ ೫.೧೦ ಕ್ಕೆ ಕರೆದಿದ್ದ ಪ್ರವಾಸಿಗರ ಸಭೆಯಲ್ಲಿ ಚರ್ಚಿಸುವ ಸಲುವಾಗಿ, ನಾನು ಸಿದ್ಧಪಡಿಸಿಟ್ಟುಕೊಂಡಿದ್ದ ರೈಲು ಮತ್ತು ಬಸ್ಸಿನ ವೇಳಾಪಟ್ಟಿ ವಿವರ ಮತ್ತು ದರ ವಿವರವನ್ನು ತೆಗೆದುಕೊಂಡು ಸಭಾಲಯಕ್ಕೆ ಹೊರಟೆವು. ಈ ಬಾರಿ ಸಭೆಯು ನಮ್ಮ ತಾಂತ್ರಿಕ ನಿರ್ದೇಶಕರಾದ ವಿಕಾಸ್ ರವರ ರೂಮಿನಲ್ಲಿ ಅವರ ಅನುಪಸ್ಥಿತಿಯಲ್ಲಿ ನಡೆದಿತ್ತು. ನಾನು ಪ್ರಸ್ತುತ ಪಡಿಸಿದ ರೈಲಿನ ವೇಳಾಪಟ್ಟಿ ಮತ್ತು ದರ ನಮಗೆ ಅನುಕೂಲಕರವಾಗಿದ್ದು ನಾವು ಬೆಂಗಳೂರಿನಿಂದ ೫ನೇ ಅಕ್ಟೋಬರ್ ಸಂಜೆ ೪.೧೫ಕ್ಕೆ ಹೊರಡುವ ಮತ್ತು ೦೮ನೇ ಅಕ್ಟೋಬರ್ ರಾತ್ರಿ ೯ಕ್ಕೆ ಹೊರಡುವ ರೈಲನ್ನು ಪ್ರಯಾಣಿಕರ ಅಂತಿಮ ಪಟ್ಟಿಯೊಂದಿಗೆ ಕಾಯ್ದಿರಿಸುವ ಸಲುವಾಗಿ ಗಹನಾವಾದ ಚರ್ಚೆ ನಡೆದಿತ್ತು. ಈ ಸಭೆಗೆ ನಾವುಗಳು ಷಣ್ಮುಖ್ ರವರನ್ನು ಬಲವಂತದಿಂದ ಕರೆದು ತಂದಿದ್ದೆವು. ಚರ್ಚೆಯ ನಡುವೆ ತಮ್ಮ ಕಾರ್ಯಾಲಯಕ್ಕೆ ಆಗಮಿಸಿದ ವಿಕಾಸ್ ರವರು ನಮ್ಮ ಪ್ರವಾಸದ ಲಘುವಿವರ ಪಡೆದುಕೊಂಡರು. ಈ ಚರ್ಚೆಯ ನಡುವೆಯೇ ವಿಕಾಸ್ ರವರಿಂದ ಒಂದು ಅನಿರೀಕ್ಷಿತ ಮತ್ತು ಆಶಾದಾಯಕ ಅಂಶ ಹೊರಬಿತ್ತು ಅದೆಂದರೆ - "ವಿಮಾನಯಾನ". ಇದಕ್ಕೆ ಪ್ರಾರಂಭದಲ್ಲಿ ಎಲ್ಲರೂ ಇದು ನಮ್ಮಂತವರಿಗಲ್ಲ ಬಿಡಿ ಸ್ವಾಮಿ ಎಂಬ ಮಾತನಾಡಿದಾಗ ಅವರು ಇಲ್ಲಾ ಬೆಂಗಳೂರಿನಿಂದ ಹೈದರಾಬಾದ್ ಗೆ ವಿಮಾನದರ ಕೊಂಚ ಕಡಿಮೆ ಇದೆ. ಸ್ವಲ್ಪ ತಡೆಯಿರಿ, ನಾನು ಇಂಟರ್ನೆಟ್ ನಲ್ಲಿ ನೋಡುತ್ತೇನೆ ಎಂದು ತಮ್ಮ ಲ್ಯಾಪ್ ಟಾಪ್ ಆನ್ ಮಾಡಿದಾಗ ನಾನು ಹೇಳಿದೆ "ಇಲ್ಲ ಬಿಡಿ ಸರ್ವರ್ ಆಫ್ ಮಾಡಿ ಬಂದಿದ್ದೇನೆ". ಆವಾಗ ಅವರು ತಮ್ಮ ಹೊಸ ಮೊಬೈಲ್ ಆದ ಸೋನಿ ಎರಿಕ್ಸನ್ - ಎಕ್ಸ್ಪೀರಿಯಾ - ಎಕ್ಸ್-೧೦ ಮೊಬೈಲ್ ನಲಿ ಬ್ರೌಸ್ ಮಾಡಿ "ಕಿಂಗ್ ಫಿಶರ್ ಏರ್ಲೈನ್ಸ್ ನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ದರ ಕೇವಲ ರೂ.೧,೫೩೦/-" ಎಂದು ತಿಳಿಸಿದರು. ಇದನ್ನು ಪ್ರಾರಂಭದಲ್ಲಿ ನಂಬದ ನಾವು ವಿಕಾಸ್ ರವರ ಕೈಯಿಂದ ಅವರ ಮೊಬೈಲ್ ಅನ್ನು ತೆಗೆದುಕೊಂಡು ಅವರು ಹೇಳಿದ್ದ ದರವನ್ನು ಖಚಿತಪಡಿಸಿಕೊಂಡೆವು. ಇದರಿಂದ ಉದ್ಗಾರಗೊಂಡ ಮುರಳಿ "ಹಾಗಿದ್ದರೆ ಹಾಗೇ ಆಗಲಿ. ನಾನು ನಮ್ಮ ಮನೆಯವರಿಗೂ ವಿಮಾನಯಾನ ಮಾಡಿಸಿದ ಸಂತೋಷ ಸಿಗುತ್ತದೆ. ಒಂದು ಬಾರಿಯಾದರೂ ಕುಟುಂಬ ಸಮೇತ ವಿಮಾನ ಪ್ರಯಾಣ ಮಾಡಿದ ಕೀರ್ತಿಯೂ ಸಿಗುತ್ತದೆ" ಎಂದರು. ಇದಕ್ಕೆ ಅಂದಿನ ಸಭೆಯಲ್ಲಿ ಹಾಜರಿದ್ದ ಕೇಶವ್, ನಾನು, ಪ್ರಸಾದ್, ಮಂಜುನಾಥ್, ಬೆಟ್ಟಪ್ಪ ಸಂಪೂರ್ಣ ಸಹಮತಿ ವ್ಯಕ್ತ ಪಡಿಸಿದರು ಸಭೆಯಲ್ಲಿ ಹಾಜರಿದ್ದ ಮತ್ತೊಬ್ಬ ಪ್ರಮುಖ ವ್ಯಕ್ತಿ ರಮೇಶ್ ರವರು ಕೊಂಚ ತಡವಾಗಿ ಅರೆ ಮನಸ್ಸಿನಿಂದ ಒಪ್ಪಿಕೊಂಡರಾದರೂ ನಂತರ ಹೃದಯಪೂರ್ವಕವಾಗಿ ಬಹುಮತದತ್ತ ಹೆಜ್ಜೆ ಹಾಕುವುದರೊಂದಿಗೆ ನಮಗೆ ಸಂತೋಷವನ್ನುಂಟು ಮಾಡಿದರು. ಆದರೆ ಷಣ್ಮುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ನಿರಮ್ಮಳವಾಗಿ ಕುಳಿತಿದ್ದರು. ಇದೇ ಸಭೆಯಲ್ಲಿ ಮತ್ತೊಂದು ಆಶ್ಚರ್ಯಕರವಾದ ಮತ್ತು ಸಂತೋಷಕರವಾದ ಸಂಗತಿಯೊಂದನ್ನು ವಿಕಾಸ್ ರವರು ನಮ್ಮ ಗಮನಕ್ಕೆ ತಂದರು. ಅದೆಂದರೆ, ಈ ಬಾರಿಯ ಪ್ರವಾಸಕ್ಕೆ ವಿಕಾಸ್ ರವರೂ ಸಹಾ ನಮ್ಮ ಜೊತೆ ಬರಲಿದ್ದಾರೆ ಎನ್ನುವುದು. ಇದು ಉಳಿದ ಸದಸ್ಯರ ಸಂತೋಷವನ್ನು ನೂರ್ಮಡಿಗೊಳಿಸಿತು. ಇಂದು ಚರ್ಚೆಯಾದ ಎಲ್ಲಾ ವಿಷಯಗಳ (ಎಲ್ಲಕ್ಕಿಂತ ಮಿಗಿಲಾಗಿ ವಿಮಾನಯಾನ) ಬಗ್ಗೆ ಕೂಲಂಕುಷವಾಗಿ ಚರ್ಚಿಸಬೇಕು ಮತ್ತು ಉಳಿದ ಸದಸ್ಯರುಗಳ (ಎಲ್ಲರಿಗಿಂತ ಮುಖ್ಯವಾಗಿ ನಮ್ಮ ಸುಬ್ಬಣ್ಣನ ಮತ್ತು "ಗಂಗೆ-ಗೌರಿ"ಯರ) ಒಪ್ಪಿಗೆಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳೋಣ ಎಂದು ತೀರ್ಮಾನಿಸಿ ಸಭೆಯನ್ನು ಅಂತ್ಯಗೊಳಿಸಿದೆವು.

No comments:

Post a Comment