ಟ್ರೈನಿನಲ್ಲಿ ಸೀಟು ಗ್ಯಾರಂಟಿ
೪ನೇ ತಾರೀಖು ನಾನು ಆಫೀಸ್ ಗೆ ಬಂದ ಕೂಡಲೇ ಎಲ್ಲರಿಗೂ ವಿಮಾನ ಪ್ರಯಾಣದ ಟಿಕೆಟ್ ನನಗೆ ತಲುಪಿರುವುದಾಗಿಯೂ ಮತ್ತು ಸೀಟುಗಳು ಖಚಿತಪಟ್ಟಿರುವುದನ್ನು ತಿಳಿಸಿದಾಗ ಎಲ್ಲರಿಗೂ ಸಂತೋಷವಾಯಿತು. ಇದೇ ಸಂದರ್ಭದಲ್ಲಿ ಷಣ್ಮುಖ್ ದಿನಾಂಕ ೦೮/೧೦/೨೦೧೧ ರ ಪ್ರವಾಸ ನಂತರದ ರೈಲ್ವೇ ಪ್ರಯಾಣವನ್ನೂ ಖಚಿತ ಮಾಡಿಕೊಂಡು ಬಿಡೋಣ ಎಂದರು. ಅದಕ್ಕೆ ಕೆಲವರು ಈಗ ನನ್ನ ಹತ್ತಿರ ಅಷ್ಟು ಹಣ ಇಲ್ಲ ಎಂದಾಗ, ಷಣ್ಮುಖ್ ರವರು "ನಾನೇ ಹಣ ಖರ್ಚು ಮಾಡಿ ಟಿಕೆಟ್ ಬುಕ್ ಮಾಡುತ್ತೇನೆ. ನೀವುಗಳು ಆನಂತರ ಅದನ್ನು ಹಿಂತಿರುಗಿಸಿದರೆ ಸಾಕು" ಎಂದದ್ದಕ್ಕೆ ಎಲ್ಲರೂ ಜೈ ಎಂದರು. ಇದರ ಸಲುವಾಗಿ ಬುಕಿಂಗ್ ಅರ್ಜಿ ತುಂಬಿಕೊಂಡು ಷಣ್ಮುಖ್ ರೈಲ್ವೇ ನಿಲ್ದಾಣದಲ್ಲಿರುವ ಮುಂಗಡ ಬುಕ್ಕಿಂಗ್ ವಿಭಾಗದಲ್ಲಿ ಧಾವಿಸಿ ಅಲ್ಲಿ ವಿಚಾರಿಸಿದಾಗ ಅವರು ಒಟ್ಟು ೩೨ ಪ್ರಯಾಣಿಕರ ಬುಂಕಿಂಗ್ ಅನ್ನು ಒಬ್ಬರೇ ಅರ್ಜಿದಾರರು ಮಾಡುವಂತಿಲ್ಲ ಅದಕ್ಕೆ ೬ ಜನ ಅರ್ಜಿದಾರರು ಬರಬೇಕಾಗುತ್ತದೆ ಅಥವಾ ನೀವು ಇಂಟರ್-ನೆಟ್ ಮುಖಾಂತರ ಮಾಡಬಹುದು ಎಂದು ತಿಳಿಸಿದರು ಎಂದು ಷಣ್ಮುಖ್ ನಮಗೆ ತಿಳಿಸಿ ಮಧ್ಯಾನ್ಹದ ನಂತರ ಬುಕಿಂಗ್ ಮಾಡೋಣ ಎಂದರು. ಅದರಂತೆ ಮದ್ಯಾನ್ಹ ೩ ಘಂಟೆಯ ನಂತರ ಬುಕಿಂಗ್ ಶುರುಮಾಡಿದರು. ಅಂತರ್ಜಾಲದ ವೇಗ ಸ್ವಲ್ಪ ಕಡಿಮೆ ಇದ್ದ ಕಾರಣ ಬುಕಿಂಗ್ ನಿಧಾನಗತಿಯಲ್ಲಿ ನಡೆದಿತ್ತು. ಈ ಮಧ್ಯೆ ಷಣ್ಮುಖ್ ಆಘಾತ ಪಡುವಂತ ಘಟನೆಯೊಂದ ನಡೆಯಿತು ಅದು ಏನೆಂದರೆ ಎಲ್ಲಾ ಟಿಕೇಟ್ ಗಳು ಬುಕ್ ಆಗಿ ಕೊನೆಯ ನಾಲ್ಕು ಮಂದಿ ಗುಂಪಿನ ಟಿಕೆಟ್ ಬುಕ್ ಮಾಡುವಾಗ ಅಂತರ್ಜಾಲದಲ್ಲಿನ ತೊಂದರೆಯಿಂದಾಗಿ ವ್ಯವಹಾರ ಪೂರ್ಣಗೊಳ್ಳಲಿಲ್ಲ (ಟಿಕೆಟ್ ಬುಕ್ ಆಗಲಿಲ್ಲ) ಆದರೆ ಷಣ್ಮುಖ್ ನ ಬ್ಯಾಂಕ್ ಅಕೌಂಟ್ ನಿಂದ ಅಷ್ಟು ಹಣ ಕಡಿತಗೊಂಡಿತ್ತು. " ಈಗ ನಾನು ಏನು ಮಾಡುವುದು" ಎಂದು ಷಣ್ಮುಖ್ ನನ್ನನ್ನು ಕೇಳಿದರು. ಅದಕ್ಕೆ ನಾನು "ಚಿಂತೆ ಮಾಡಬೇಡಿ ಅಷ್ಟು ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಖಂಡಿತ ಬರುತ್ತದೆ. ನನಗೆ ಇಂಥ ಒಂದೆರಡು ಅನುಭವವಾಗಿದೆ. ನೀವು ನಿರ್ಭೀತಿಯಿಂದಿರಿ. ಮತ್ತು ಅಪೂರ್ಣಗೊಂಡಿರುವ ಬುಂಕಿಂಗ್ ಅನ್ನು ಪೂರ್ಣಗೊಳಿಸಿ" ಎಂದೆ. ಅವರು ಚಿಂತಾಕ್ರಾಂತರಾಗಿಯೇ ಅಪೂರ್ಣವಾಗಿದ್ದ ಬುಕಿಂಗ್ ಕಾರ್ಯವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ನಾವುಗಳು ಹೈದರಾಬಾದ್ ನ ಕಾಚಿಗುಡ ರೈಲ್ವೇ ನಿಲ್ದಾಣದಿಂದ ದಿನಾಂಕ ೦೮.೧೦.೧೧ ರ ರಾತ್ರಿ ೦೯.೦೦ ಘಂಟೆಗೆ ಹೊರಟು ದಿ. ೦೯.೧೦.೧೧ ರ ಭಾನುವಾರ ಬೆಳೆಗ್ಗೆ ೧೦.೩೦ಕ್ಕೆ ಯಶವಂತಪುರ ತಲುಪುವುದು ನಿಶ್ಚಿತವಾಯಿತು.
No comments:
Post a Comment