Thursday, October 20, 2011

ತೆಲಂಗಾಣ, ಪ್ರಯಾಣ ಮತ್ತು ವೀರೇಶ್

ತೆಲಂಗಾಣ ಮತ್ತು ನಮ್ಮ ಪ್ರಯಾಣ

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಸಂಬಂಧ ಹೈದರಾಬಾದ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಹೋರಾಟ ಸಾಕಷ್ಟು ಸದಸ್ಯರಲ್ಲಿ ತಳಮಳಕ್ಕೆ ಎಡೆ ಮಾಡಿಕೊಟ್ಟಿತು. ಬಹು ಮುಖ್ಯವಾಗಿ ಶ್ರೀ. ಶಿವರಾಮ ಶೆಟ್ಟಿಯವರಂತೂ ಈ ಸಂಬಂಧ ದಿನೇ ದಿನೇ ನನಗೆ ಫೋನ್ ಮುಖಾಂತರ ಅಲ್ಲಿ ಹಿಂದಿನ ದಿನ ನಡೆದ ಮತ್ತು ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿದ್ದ ಚಳುವಳಿ ಮತ್ತು ಹೋರಾಟ ಕಾರ್ಯಕ್ರಮದ ವಿಷಯವನ್ನು ತಿಳಿಸಿ ನನ್ನ ತಲೆಗೆ ಹುಳ ಬಿಡಲು ಶುರು ಮಾಡಿದರು. ಅವರ ಈ ಸಂಗ್ರಹಿತ ಘಟನೆ ಕುರಿತು ನಾನು ದಿನವೂ ನಂದ್ ಇಂಟರ್ನ್ಯಾಷನಲ್ ನ ಪ್ರಿಯಾ ಅವರೊಂದಿಗೆ ಚರ್ಚಿಸಿ ಏನೂ ಭಯಪಡುವ ಅಗತ್ಯವಿಲ್ಲ ಎಂದು ಶಿವರಾಮ್ ರವರಿಗೆ ಹೇಳುತ್ತಿದ್ದೆ. ಪ್ರವಾಸದ ದಿನಗಳು ಹತ್ತಿರವಾಗತೊಡಗಿದಂತೆ ಸದಸ್ಯರನೇಕರಲ್ಲಿ ಆತಂಕಕಾರಿ ವಿಷಯ ಮನೆಮಾಡಿತ್ತು. ಇದನ್ನು ನಿವಾರಣೆ ಮಾಡುವ ಸಲುವಾಗಿ ನಾನು ನಮ್ಮ ಕಂಪೆನಿಯ ಸರಬರಾಜುದಾರರಲ್ಲಿ ಒಬ್ಬರಾದ ಮತ್ತು ಹೈದರಾಬಾದ್ ನ ವಾಸಿಯಾದ ಶ್ರೀ. ಕಾರ್ತಿಕ್ ರೆಡ್ಡಿ (ಹೈಟೆಕ್ ಹೋರೋಲೊಜಿಕಲ್ಸ್ ನ ಮಾಲೀಕ) ಯವರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯನ್ನು ಸದಸ್ಯರೊಟ್ಟಿಗೆ ವಿನಿಮಯ ಮಾಡಿಕೊಂಡು ಅವರಲ್ಲಿ ಉಂಟಾಗಿದ್ದ ತಳಮಳವನ್ನು ತಕ್ಕಮಟ್ಟಿಗೆ ತಹಬಂದಿಗೆ ತರುವಲ್ಲಿ ಯಶಸ್ವಿಯಾದೆ. ಕಾರ್ತಿಕ್ ರೆಡ್ಡಿ ಯವರ ಪ್ರಕಾರ ನಾವು ಪ್ರವಾಸ ಹಮ್ಮಿಕೊಂಡಿರುವ ದಿನಗಳಂದು ಅಲ್ಲಿ ಯಾವುದೇ ರೀತಿಯ ಬಂದ್ ಆಗಲೀ ಚಳುವಳಿಯಾಗಲೀ ಇರುವುದಿಲ್ಲ ಇದಕ್ಕೆ ಕಾರಣ ಅಲ್ಲಿಯೂ ಆಚರಣೆಯಲ್ಲಿರುವ ನವರಾತ್ರಿ ಹಬ್ಬ. ಈ ವಿಷಯ ನಮ್ಮನ್ನು ನಿರಮ್ಮಳವಾಗಿಸಿ, ನಿರಾತಂಕವಾಗಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸಿತು. ಇದೇ ಸಂದರ್ಭದಲ್ಲಿ ವಿಕಾಸ್ ರವರು "ನಾನು ನಿಮ್ಮ ಲಾಡ್ಜ್ ನಲ್ಲಿ ಇರುವುದಿಲ್ಲ. ನಾನು ಬೇರೆ ಲಾಡ್ಜ್ ನಲ್ಲಿ ಇರುತ್ತೇನೆ. ನನಗಾಗಿ ಈಗಾಗಲೇ ಬುಕ್ ಮಾಡಿರುವ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಕೈಬಿಡುವಂತೆ ಲಾಡ್ಜ್ ನವರಿಗೆ ಹೇಳಿ. ನಾನು ಬೇರೇ ಲಾಡ್ಜ್ ನಲ್ಲಿದ್ದರೂ ಸಹಾ ನಿಮ್ಮ ಸಮಯಕ್ಕೆ ಮತ್ತು ನೀವು ಹೇಳಿದ ಸ್ಥಳಕ್ಕೆ ಬಂದು ನಿಮ್ಮ ತಂಡವನ್ನು ಸೇರಿಕೊಳ್ಳುತ್ತೇನೆ" ಎಂದು ತಿಳಿಸಿದರು. ಇದರಿಂದ ಕೊಂಚ ಮುಜುಗರಕ್ಕೆ ಒಳಗಾದ ನಾವು ಈಗಾಗಲೇ ಬುಕ್ ಮಾಡಲಾಗಿರುವ ಕೊಠಡಿಯನ್ನು ಕ್ಯಾನ್ಸಲ್ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವ ಸಮಯದಲ್ಲಿ ವೀರೇಶ್ ಫೋನ್ ಮಾಡಿ, "ನಾನೂ ಸಹಾ ಹೈದರಾಬಾದ್ಗೆ ಕುಟುಂಬ ಸಮೇತ ಕಾರಿನಲ್ಲಿ ಬರುತ್ತೇನೆ. ಆದರೆ ನನಗೆ ನೀವು ಉಳಿದುಕೊಂಡಿರುವ ಲಾಡ್ಜ್ ನಲ್ಲಿ ಒಂದು ರೂಮನ್ನು ಬುಕ್ ಮಾಡಿಕೊಡಿ" ಎಂದು ತಿಳಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ನಾನು ಪ್ರಿಯಾ ಅವರೊಟ್ಟಿಗೆ ಚರ್ಚಿಸಿ, ವಿಕಾಸ್ ರವರಿಗಾಗಿ ಮೀಸಲು ಮಾಡಿದ್ದ ಎ.ಸಿ. ರೂಮ್ ಬದಲಿಗೆ ಒಂದು ಡಬಲ್ ಬೆಡ್ (ಏರ್ ಕೂಲ್ಡ್) ರೂಮನ್ನು ಕೊಡುವಂತೆ ಮಾಡಿದ ಮನವಿಗೆ ತತ್ತಕ್ಷಣ ಸ್ಪಂದಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಕೊಠಡಿ ಬದಲಾಯಿಸಿಕೊಟ್ಟರು. ಈ ವಿಷಯ ವೀರೇಶ್ ಗೆ ಕೂಡ ಖುಷಿ ಕೊಟ್ಟಿತು.

No comments:

Post a Comment