Monday, October 31, 2011

ಜೆಟ್ ಜೊತೆಗಿನ ಒಡನಾಟ !!


ಜೆಟ್’ - ’ಎಡವಟ್’


ಕ್ಯಾಮೆರಾ ಮ್ಯಾನ್ ಮಹೇಶ್ ಜೊತೆ ಸಹನಾ ಮತ್ತು ವಿದ್ಯಾ ಹೆಗಡೆ - ದೇವನಹಳ್ಳಿ ವಿಮಾನ ನಿಲ್ದಾಣ

ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಂಡು ದಿ.೦೫/೧೦/೨೦೧೧ ರ ಬುಧವಾರ ಕಂಪೆನಿಯಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ೯.೪೦ ರ ಸುಮಾರಿಗೆ ಕಛೇರಿಯಿಂದ ನಿರ್ಗಮಿಸಿ ೧೦.೩೦ಕ್ಕೆ ಗೌರ್ನಮೆಂಟ ಕಾಲೇಜ್ ಬಳಿ ಸೇರಿ ಅಲ್ಲಿಂದ ಹೊರಡಲು ತೀರ್ಮಾನಿಸಿದೆವು. ಅದರಂತೆ ನಾನು ಮನೆಗೆ ಬಂದ ಕೂಡಲೇ ಮಡದಿ ಸಹನಾಗೆ ಬೇಗನೇ ಹೊರಡಲು ಸೂಚನೆ ನೀಡಿದೆ ಮತ್ತು ತಂದೆಯವರಿಗೆ ಕಾರಿನಲ್ಲಿ ಬಿಡಲು ತಿಳಿಸಿದೆ ಜೊತೆಗೆ ನಾನು ಹೊರಡಲು ತಯಾರಾಗಿ ಲಘು ಉಪಹಾರವನ್ನು ಸೇವಿಸಿದೆ ಆಗ ಸಹನಾ "ಹೊರಡುವ ಮೊದಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಬರೋಣ" ಎಂದಳು ಅದಕ್ಕೆ ಉತ್ತರಿಸಿದ ನಾನು "ಈಗ ನಾವು ಅಲ್ಲಿಗೆ ಹೋಗಿ ದರ್ಶನ ಮಾಡಿಕೊಂಡು ಬರುವ ಹೊತ್ತಿಗೆ ಸಮಯವಾಗುತ್ತದೆ ಆದ್ದರಿಂದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬದಲಾಗಿ ಮನೆಯ ಸಮೀಪದಲ್ಲೇ ಇರುವ ವಿಘ್ನ ನಿವಾರಕನ ದೇವಾಲಯಕ್ಕೆ ಹೋಗಿಬರೋಣ" ಎಂದೆ. ಆದರೆ ಅವಳು ಚಾಮುಂಡೇಶ್ವರಿ ದೇವಸ್ಥಾನಕ್ಕೇ ಹೋಗಬೇಕೆಂದು ಚಾಮುಂಡಿ ಅವತಾರವನ್ನೇ ತಾಳಿದ್ದರಿಂದ ಅವಳನ್ನು ನಾನು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕರೆದು ದರ್ಶನ ಮುಗಿಸುವ ಹೊತ್ತಿಗೆ ಸರಿಯಾಗಿ ಪ್ರಸಾದ್ ಮತ್ತು ಕೇಶವ್ ರವರಿಂದ ಮೇಲಿಂದ ಮೇಲೆ ದೂರವಾಣಿ ಕರೆ ಬರತೊಡಗಿದವು. ಇದರಿಂದ ನಾವು ದೇವಸ್ಥಾನದಿಂದ ಆತುರಾತುರವಾಗಿ ಹೊರಟು ಮನೆ ತಲುಪಿ ಅಲ್ಲಿಂದ ಕಾರಿನಲ್ಲಿ ಕಾಲೇಜ್ ಬಳಿ ತಲುಪುವ ಹೊತ್ತಿಗೆ ಘಂಟೆ ೧೧ ಆಗಿತ್ತು. ಆದರೂ ನಮ್ಮ ವಾಹನ ಹೊರಡಲು ಮತ್ತೊಬ್ಬರ ಕೊರತೆ ಇತ್ತು ಅದು - ಶ್ರೀ ಸುಬ್ರಹ್ಮಣ್ಯ ಮತ್ತು ಕುಟುಂಬ. ಅವರನ್ನು ಹೊರಡಿಸಲು ಎಲ್ಲರೂ ಪಟ್ಟ ಪ್ರಯತ್ನ ಮಾತ್ರ ಅಷ್ಟಿಷ್ಟಲ್ಲ ಎಲ್ಲರೂ ಆತುರವಾಗಿ ಬಂದರೂ ಅವರು ಮಾತ್ರ ಬಹಳ ನಿಧಾನವಾಗಿಯೇ ವಾಹನವನ್ನೇರಿದರು. ಆಗ ಸಮಯ ೧೧.೩೦. ಅಲ್ಲಿಂದ ಹೊರಟು ಕ್ಯಾತ್ಸಂದ್ರದಲ್ಲಿ ಷಣ್ಮುಖ್ ಮತು ಕುಟುಂಬದವರನ್ನು ಮತ್ತು ದಾಬಸ್ಪೇಟೆ ಯಲ್ಲಿ ಗಾಯಕ್ವಾಡ್ ರವರ ಪುತ್ರಿ ಶೃತಿ ಬರಮಾಡಿಕೊಂಡು ಮಾರ್ಗದಲ್ಲೇ ಪಲಾವ್ ಮತ್ತು ಬೋಂಡ ವನ್ನು ಉಪಹಾರವಾಗಿ ಸೇವಿಸಿ ೧.೪೫ಕ್ಕೆ ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆವು. 


ನಂತರದ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳುವ ಸಲುವಾಗಿ ಅಂದರೆ ಬೋರ್ಡಿಂಗ್ ಪಾಸ್ ಪಡೆಯುವುದಕ್ಕೆ ನಾವು "ಜೆಟ್ ಕನೆಕ್ಟ್" (ಜೆಟ್ ಏರ್ವೇಸ್) ಕೌಂಟರ್ ಗೆ ಬಂದಾಗ ಅವರು ಒಂದು ಶಾಕ್ ನೀಡಿದರು. ಅದು - "೩೩ ಜನರಲ್ಲಿ ಸಧ್ಯಕ್ಕೆ ನಾವು ೨೫ ಮಂದಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ ಉಳಿದ ೮ ಮಂದಿಗೆ ನಂತರ ನೋಡೋಣ". ಹೀಗೆ ಹೇಳಿದ್ದು ಜೆಟ್ ಏರ್ವೇಸ್ ನ ಸಿಬ್ಬಂಧಿ ಧನ್ಯಾ. ಇದಕ್ಕೆ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ನಾನು "ನಾವು ಆಗಸ್ಟ್ ೩ ನೇ ತಾರೀಖ್ ಅಂದರೆ ೨ ತಿಂಗಳಿಗೆ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದರೂ ಯಾಕೆ ನಮಗೆ ಈ ರೀತಿಯ ತೊಂದರೆ ಎಂದು ಪ್ರಶ್ನಿಸಿ ತಕ್ಷಣವೇ ಕಿಂಗ್ ಫಿಶರ್ ನ ಹೇಮಾಮಾಲಿನಿ ಯನ್ನು ಸಂಪರ್ಕಿಸಿ ಅವರಿಗೆ ಅಲ್ಲಿನ ವಿದ್ಯಮಾನವನ್ನು ತಿಳಿಸಿ ಈ ಬಗ್ಗೆ ಜೆಟ್ ನ ಸಿಬ್ಬಂಧಿಯೊಂದಿಗೆ ಮಾತನಾಡುವಂತೆ ಕೋರಿ, ಮೊಬೈಲ್ ಅನ್ನು ಧನ್ಯಾಗೆ ಕೊಟ್ಟೆ ಈ ಸಂಬಧ ಅವರುಗಳು ಬಹಳ ಸಮಯ ಚರ್ಚಿಸಿದರಾದರೂ ತಕ್ಷಣಕ್ಕೆ ೨೫ ಮಂದಿಗೆ ಮಾತ್ರ ಟಿಕೆಟ್ ನೀಡಿದರು. ನಂತರ ನಾವು ಪಕ್ಕದಲ್ಲೇ ಇದ್ದ ಕಿಂಗ್ ಫಿಶರ್ ನ ಟಿಕೆಟ್ ಬುಕ್ಕಿಂಗ್ ಕೌಂಟರ್ ಗೆ ತೆರಳಿ ಅಲ್ಲಿದ್ದ ಸಿಬ್ಬಂಧಿ ಯಲ್ಲಿ ಒಬ್ಬರಾದ ಬಿಂದ್ಯಾ ರನ್ನು ಭೇಟಿಯಾಗಿ ನಮಗೆ ಉಂಟಾಗಿರುವ ತೊಂದರೆಯನ್ನು ವಿವರಿಸಿದೆವು. ಮತ್ತೆ ನಾನು ಹೇಮಾಮಾಲಿನಿಯನ್ನು ಸಂಪರ್ಕಿಸಿ ಬಿಂದ್ಯಾ ಜೊತೆ ಚರ್ಚಿಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿದೆ ಇದೆಲ್ಲದರ ನಡುವೆ ಬಿಂದ್ಯಾ ಮತ್ತು ಧನ್ಯಾ ನಡುವೆ ಸಾಕಷ್ಟು ಬಿರುಸಿನ ಮಾತುಕತೆ ನಡೆದಿತ್ತು. ನಂತರ ಹೇಮಾಮಾಲಿನಿಯವರೊಂದಿಗೆ ಮಾತನಾಡುವಂತೆ ತಿಳಿಸಿ ಮೊಬೈಲ್ ಅನ್ನು ಬಿಂದ್ಯಾಗೆ ಕೊಟ್ಟೆ ಸಾಕಷ್ಟು ಚರ್ಚೆ ನಂತರ ಬಿರುಸಿನ ವಿದ್ಯಮಾನಗಳು ನಡೆದು ಎಲ್ಲರಿಗೂ ಟಿಕೆಟ್ ಸಿಗುವ ಮೂಲಕ ಸುಖಾಂತ್ಯ ಕಂಡಿತಾದರೂ ಒಂದು ಹೊಸ ಅನುಭವವನ್ನು ಕೊಟ್ಟಿತು. ವೇಳಾಪಟ್ಟಿಯ ಸಮಯಕ್ಕೆ ಸರಿಯಾಗಿ ಅಂದರೆ ಮೂರು ಘಂಟೆಗೆ ಸರಿಯಾಗಿ ಹೊರಟು ನಾಲ್ಕು ಘಂಟೆಗೆ ಸರಿಯಾಗಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆವು.

ಚಿತ್ರ - ವಿಚಿತ್ರಗಳು:

 ದೇವನಹಳ್ಳಿ ವಿಮಾನ ನಿಲ್ದಾಣದ ವಿಹಂಗಮ ನೋಟ


 ಸಹನಾ ಜೊತೆ ವಿದ್ಯಾ ಹೆಗಡೆ - ದೇವನಹಳ್ಳಿ ವಿಮಾನ ನಿಲ್ದಾಣ


 "ಏ ಫೋಟೋ ಆಮೇಲೆ ತೆಗಿಯಪ್ಪ ಮೊದಲು ಟಿಕೆಟ್ ಕೊಡಿಸು" ಎನ್ನುತ್ತಿರುವ ಮುರಳಿ


 ನಮ್ಮ ವಿಮಾನ


 ವಿಮಾನದ ಒಳಾಂಗಣ


 ವಿಮಾನದಲ್ಲಿ ನಾನು


 ಸಹನಾ, ನಾಗಲಕ್ಷ್ಮಿ, ರಮೇಶ್, ಗಾಯಕ್ವಾಡ್ ಮತ್ತು ನಳಿನಿ ಗಾಯಕ್ವಾಡ್











 ದೇವನಹಳ್ಳಿ














 ಹೈದರಾಬಾದ್ ಬಳಿ ವಿಮಾನ ಇಳಿಯುವ ಹೊತ್ತಿಗೆ





 ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ





 ರಾಜೀವ್ ಗಾಂಧಿ ಅಂತರ್ಷ್ಟೀಯ ಮಿಮಾನ ನಿಲ್ದಾಣ - ಹೈದರಾಬಾದ್.



ವಿಮಾನದ ಟೇಕ್-ಆಫ್ ನ ವಿಡಿಯೋ










Thursday, October 20, 2011

ತೆಲಂಗಾಣ, ಪ್ರಯಾಣ ಮತ್ತು ವೀರೇಶ್

ತೆಲಂಗಾಣ ಮತ್ತು ನಮ್ಮ ಪ್ರಯಾಣ

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಸಂಬಂಧ ಹೈದರಾಬಾದ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಹೋರಾಟ ಸಾಕಷ್ಟು ಸದಸ್ಯರಲ್ಲಿ ತಳಮಳಕ್ಕೆ ಎಡೆ ಮಾಡಿಕೊಟ್ಟಿತು. ಬಹು ಮುಖ್ಯವಾಗಿ ಶ್ರೀ. ಶಿವರಾಮ ಶೆಟ್ಟಿಯವರಂತೂ ಈ ಸಂಬಂಧ ದಿನೇ ದಿನೇ ನನಗೆ ಫೋನ್ ಮುಖಾಂತರ ಅಲ್ಲಿ ಹಿಂದಿನ ದಿನ ನಡೆದ ಮತ್ತು ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿದ್ದ ಚಳುವಳಿ ಮತ್ತು ಹೋರಾಟ ಕಾರ್ಯಕ್ರಮದ ವಿಷಯವನ್ನು ತಿಳಿಸಿ ನನ್ನ ತಲೆಗೆ ಹುಳ ಬಿಡಲು ಶುರು ಮಾಡಿದರು. ಅವರ ಈ ಸಂಗ್ರಹಿತ ಘಟನೆ ಕುರಿತು ನಾನು ದಿನವೂ ನಂದ್ ಇಂಟರ್ನ್ಯಾಷನಲ್ ನ ಪ್ರಿಯಾ ಅವರೊಂದಿಗೆ ಚರ್ಚಿಸಿ ಏನೂ ಭಯಪಡುವ ಅಗತ್ಯವಿಲ್ಲ ಎಂದು ಶಿವರಾಮ್ ರವರಿಗೆ ಹೇಳುತ್ತಿದ್ದೆ. ಪ್ರವಾಸದ ದಿನಗಳು ಹತ್ತಿರವಾಗತೊಡಗಿದಂತೆ ಸದಸ್ಯರನೇಕರಲ್ಲಿ ಆತಂಕಕಾರಿ ವಿಷಯ ಮನೆಮಾಡಿತ್ತು. ಇದನ್ನು ನಿವಾರಣೆ ಮಾಡುವ ಸಲುವಾಗಿ ನಾನು ನಮ್ಮ ಕಂಪೆನಿಯ ಸರಬರಾಜುದಾರರಲ್ಲಿ ಒಬ್ಬರಾದ ಮತ್ತು ಹೈದರಾಬಾದ್ ನ ವಾಸಿಯಾದ ಶ್ರೀ. ಕಾರ್ತಿಕ್ ರೆಡ್ಡಿ (ಹೈಟೆಕ್ ಹೋರೋಲೊಜಿಕಲ್ಸ್ ನ ಮಾಲೀಕ) ಯವರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯನ್ನು ಸದಸ್ಯರೊಟ್ಟಿಗೆ ವಿನಿಮಯ ಮಾಡಿಕೊಂಡು ಅವರಲ್ಲಿ ಉಂಟಾಗಿದ್ದ ತಳಮಳವನ್ನು ತಕ್ಕಮಟ್ಟಿಗೆ ತಹಬಂದಿಗೆ ತರುವಲ್ಲಿ ಯಶಸ್ವಿಯಾದೆ. ಕಾರ್ತಿಕ್ ರೆಡ್ಡಿ ಯವರ ಪ್ರಕಾರ ನಾವು ಪ್ರವಾಸ ಹಮ್ಮಿಕೊಂಡಿರುವ ದಿನಗಳಂದು ಅಲ್ಲಿ ಯಾವುದೇ ರೀತಿಯ ಬಂದ್ ಆಗಲೀ ಚಳುವಳಿಯಾಗಲೀ ಇರುವುದಿಲ್ಲ ಇದಕ್ಕೆ ಕಾರಣ ಅಲ್ಲಿಯೂ ಆಚರಣೆಯಲ್ಲಿರುವ ನವರಾತ್ರಿ ಹಬ್ಬ. ಈ ವಿಷಯ ನಮ್ಮನ್ನು ನಿರಮ್ಮಳವಾಗಿಸಿ, ನಿರಾತಂಕವಾಗಿ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸಿತು. ಇದೇ ಸಂದರ್ಭದಲ್ಲಿ ವಿಕಾಸ್ ರವರು "ನಾನು ನಿಮ್ಮ ಲಾಡ್ಜ್ ನಲ್ಲಿ ಇರುವುದಿಲ್ಲ. ನಾನು ಬೇರೆ ಲಾಡ್ಜ್ ನಲ್ಲಿ ಇರುತ್ತೇನೆ. ನನಗಾಗಿ ಈಗಾಗಲೇ ಬುಕ್ ಮಾಡಿರುವ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನು ಕೈಬಿಡುವಂತೆ ಲಾಡ್ಜ್ ನವರಿಗೆ ಹೇಳಿ. ನಾನು ಬೇರೇ ಲಾಡ್ಜ್ ನಲ್ಲಿದ್ದರೂ ಸಹಾ ನಿಮ್ಮ ಸಮಯಕ್ಕೆ ಮತ್ತು ನೀವು ಹೇಳಿದ ಸ್ಥಳಕ್ಕೆ ಬಂದು ನಿಮ್ಮ ತಂಡವನ್ನು ಸೇರಿಕೊಳ್ಳುತ್ತೇನೆ" ಎಂದು ತಿಳಿಸಿದರು. ಇದರಿಂದ ಕೊಂಚ ಮುಜುಗರಕ್ಕೆ ಒಳಗಾದ ನಾವು ಈಗಾಗಲೇ ಬುಕ್ ಮಾಡಲಾಗಿರುವ ಕೊಠಡಿಯನ್ನು ಕ್ಯಾನ್ಸಲ್ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವ ಸಮಯದಲ್ಲಿ ವೀರೇಶ್ ಫೋನ್ ಮಾಡಿ, "ನಾನೂ ಸಹಾ ಹೈದರಾಬಾದ್ಗೆ ಕುಟುಂಬ ಸಮೇತ ಕಾರಿನಲ್ಲಿ ಬರುತ್ತೇನೆ. ಆದರೆ ನನಗೆ ನೀವು ಉಳಿದುಕೊಂಡಿರುವ ಲಾಡ್ಜ್ ನಲ್ಲಿ ಒಂದು ರೂಮನ್ನು ಬುಕ್ ಮಾಡಿಕೊಡಿ" ಎಂದು ತಿಳಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ನಾನು ಪ್ರಿಯಾ ಅವರೊಟ್ಟಿಗೆ ಚರ್ಚಿಸಿ, ವಿಕಾಸ್ ರವರಿಗಾಗಿ ಮೀಸಲು ಮಾಡಿದ್ದ ಎ.ಸಿ. ರೂಮ್ ಬದಲಿಗೆ ಒಂದು ಡಬಲ್ ಬೆಡ್ (ಏರ್ ಕೂಲ್ಡ್) ರೂಮನ್ನು ಕೊಡುವಂತೆ ಮಾಡಿದ ಮನವಿಗೆ ತತ್ತಕ್ಷಣ ಸ್ಪಂದಿಸಿ ನಮ್ಮ ಅನುಕೂಲಕ್ಕೆ ತಕ್ಕಂತೆ ಕೊಠಡಿ ಬದಲಾಯಿಸಿಕೊಟ್ಟರು. ಈ ವಿಷಯ ವೀರೇಶ್ ಗೆ ಕೂಡ ಖುಷಿ ಕೊಟ್ಟಿತು.

Wednesday, October 19, 2011

ಬಾಂಬ್ ಠುಸ್ - ಹೊಸ ಸೇರ್ಪಡೆ

ತಂಡಕ್ಕೆ ಹೊಸ ಸೇರ್ಪಡೆ

ಈ ಎಲ್ಲಾ ಬೆಳವಣಿಗೆಗಳ ನಡುವೆ, ತಂಡದ ಸದಸ್ಯರಲ್ಲಿ ಒಬ್ಬರಾದ ವಿಕಾಸ್ ರವರು ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ ಮತ್ತು ಸರಬರಾಜುದಾರರಲ್ಲಿ ಒಬ್ಬರಾದ ಶ್ರೀ. ವೀರೇಶ್ ರವರನ್ನು ಸಂಪರ್ಕಿಸಿ ಅವರನ್ನೂ ನಮ್ಮ ಜೊತೆ ಹೈದರಾಬಾದ್ ಪ್ರವಾಸಕ್ಕೆ ಆಹ್ವಾನಿಸಿದರು. ಇದಕ್ಕೆ ವಿವರಣೆ ಬಯಸಿದ ವೀರೇಶ್ ನನ್ನನ್ನು ಸಂಪರ್ಕಿಸಿ ವಿವರಣೆ ಪಡೆದು ಅವರ ಸಂದಿಗ್ದತೆಯನ್ನೂ ತೋಡಿಕೊಂಡರು. "ನನಗೆ ವಿಮಾನದಲ್ಲಿ ನಿಮ್ಮಗಳ ಜೊತೆ ಪ್ರಯಾಣ ಮಾಡುವ ಆಸೆ. ಆದರೆ ನಾನು ಪ್ರವಾಸಕ್ಕೆ ಬಂದರೆ ಕುಟುಂಬ ಸಮೇತನಾಗಿ ಬರಬೇಕು. ಕುಟುಂಬ ಸಮೇತ ಬಂದರೆ ವಿಮಾನ ಪ್ರಯಾಣ ಬಹಳ ದುಬಾರಿಯಾಗುತ್ತದೆ. ಅಲ್ಲದೇ ಅದೇ ದಿನಗಳಲ್ಲಿ ನಾನು ನಮ್ಮ ನೆಂಟರಿಷ್ಟರ ಜೊತೆ ಪ್ರವಾಸಕ್ಕೆ ಹೋಗುವ ಕಾರ್ಯಕ್ರಮಕ್ಕೆ ಕೂಡ ಒಪ್ಪಿಗೆ ನೀಡಿದ್ದೇನೆ. ಏನು ಮಾಡುವುದು?" ಎಂದ ಕೂಡಲೇ ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಜೀವನ ಸಹಚಾರಿಣಿ ಶ್ರೀಮತಿ. ಸೌಮ್ಯ ವೀರೇಶ್ ರವರು "ತಗಲಾಕ್ಕೊಂಡೇ ನಾನು .... " ಹಾಡನ್ನು ಹಾಡಿ ನನ್ನನ್ನು ಹಾಗೂ ವೀರೇಶ್ ರವರನ್ನು ರಂಜಿಸಿದರು. ತಮ್ಮ ಅಂತಿಮ ತೀರ್ಮಾನವನ್ನು ಸಧ್ಯದಲ್ಲೇ ತಿಳಿಸುತ್ತೇನೆಂದ ವೀರೇಶ್ ಫೋನಿನಲ್ಲಿನ ಸಂವಾದಕ್ಕೆ ತೆರೆ ಎಳೆದರು.

ತೀವ್ರ ಚರ್ಚೆ ಎಡೆಮಾಡಿ ಕೊಟ್ಟಿದ್ದ ಈ ವಿಷಯಕ್ಕೆ ಅಂಕುಶ ಹಾಕಿದವರು ಕೇಶವ್. ಪ್ರವಾಸಕ್ಕೆ ಇನ್ನು ನಾಲ್ಕೈದು ದಿನ ಇರುವಾಗ ಕೇಶವ್ ರವರು ರಮೇಶ್ ಸಿಡಿಸಿದ್ದ ಬಾಂಬ್ ಅನ್ನು ನಿಶ್ಕ್ರಿಯಗೊಳಿಸಿ ಅವರು ಪ್ರವಾಸಕ್ಕೆ ಬರುವ ವಿಷಯವನ್ನು ಖಚಿತ ಪಡಿಸಿದರಲ್ಲದೇ ಅವರಿಗಾಗಿ ಮತ್ತೊಂದು ಟಿಕೆಟ್ (ವಿಮಾನಕ್ಕೆ ಮತ್ತು ಟ್ರೈನ್ ಗೆ) ಖರೀದಿಸುವಂತೆ ತಿಳಿಸಿದರು. ನಾನು ಆನ್ ಲೈನ್ ಮುಖಾಂತರ ನಮ್ಮ ವಿಮಾನದಲ್ಲೇ ನಮಗಿಂತ ಹೆಚ್ಚಿನ ದರ ತೆತ್ತು ರಮೇಶ್ ಗೆ ಟಿಕೆಟ್ ಬುಕ್ ಮಾಡಿದೆ. ಅದೇ ರೀತಿ ಹಿಂದಿರುಗುವ ರೈಲು ಪ್ರಯಾಣದ ಟಿಕೆಟ್ ಅನ್ನೂ ಆನ್ ಲೈನ್ ಮುಖಾಂತರ ಖರೀದಿಸಿದೆ. ಆದರೆ ಅದು ವ್ಯಟಿಂಗ್ ಲಿಸ್ಟ್ ಟಿಕೆಟ್ ಆಗಿತ್ತು. ಇದರೊಂದಿಗೆ ನಮ್ಮ ತಂಡದ ಸಂಖ್ಯೆ ೩೩ಕ್ಕೆ ಏರಿತು.

ಶಾಕ್ ಕೊಟ್ಟ ರಮೇಶ್

ಜನ-ಜೀವನ ಅಸ್ಥವ್ಯಸ್ಥ !!!

ರಮೇಶ್ ಮತ್ತು "ಬಾಂಬ್”


ಒಹ್ ಯಾರೂ ಗಾಬರಿಯಾಗಬೇಕಾಗಿಲ್ಲ. ನಾನು ಹೇಳಲು ಹೊರಟಿರುವುದು ಯಾವುದೇ ಹೋರಾಟದಿಂದಾಗಲೀ ಅಥವಾ ಬಂದ್ ನಿಂದಾಗಲೀ ಆದ ಅಸ್ಥವ್ಯಸ್ಥವಲ್ಲ. ಪ್ರವಾಸ ಹೊರಟಿರುವ ೩೨ ಸದಸ್ಯರ ತಂಡದಲ್ಲಿ ಉಂಟಾದ ಅಸ್ಥವ್ಯಸ್ಥ. ಹೌದು, ಪ್ರವಾಸದ ದಿನ ಇನ್ನು ೧೫ ದಿನ ಇದೆ ಎನ್ನುವಾಗಲೇ ನಮ್ಮ ತಂಡದ ಪ್ರಮುಖ ಸದಸ್ಯರೂ ಮತ್ತೂ ಎಲ್ಲಾ ಪ್ರವಾಸಗಳ ಮುಖ್ಯ ಕಾರ್ಯ ನಿರ್ವಾಹಕರೂ ಆದ ಶ್ರೀ.ರಮೇಶ್ ರವರು "ನಾನು ಈ ಬಾರಿ ಪ್ರವಾಸಕ್ಕೆ ಬರುವುದಿಲ್ಲ" ಎಂಬ ಪಟಾಕಿಯನ್ನು ನನ್ನ ಬಳಿ ದಿನ ಬಿಟ್ಟು ದಿನ ಸಿಡಿಸುತ್ತಿದ್ದರು. ನಾನು ಇದನ್ನು ಪ್ರತಿ ವರ್ಷದ ಹಾಗೆ ಒಂದು ಚಿನಕುರುಳಿ ಪಟಾಕಿಯನ್ನಾಗಿ ತೆಗೆದುಕೊಂಡು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೂ ಈ ವಿಷಯವನ್ನು ಪ್ರಸಾದ್, ಷಣ್ಮುಖ್, ಮಂಜುನಾಥ್, ಕೇಶವ್ ಮತ್ತು ಗಾಯಕ್ವಾಡ್ ರವರ ಬಳಿ ಚರ್ಚಿಸಿದ್ದೆ. ಎಲ್ಲರೂ ಹೇಳಿದ್ದೂ ಕೂಡ ಹೇಳಿದ್ದು "ಅವರು ಸುಮ್ಮನೆ ಹಾಗೆ ಹೇಳುತ್ತಾರೆ. ಆದರೆ ಅವರು ಪ್ರವಾಸಕ್ಕೆ ಬರುವುದು ನಿಶ್ಚಿತ" ಎಂದು. ಪ್ರವಾಸಕ್ಕೆ ದಿನಗಣನೆ ಆರಂಭವಾಗುವ ಹೊತ್ತಿಗೆ ಬಾಂಬ್ ಸಿಡಿಸಿದ ರಮೇಶ್ "ನಾನು ಪ್ರವಾಸಕ್ಕೆ ಬರಲು ಸಾಧ್ಯವೇ ಇಲ್ಲ. ನನ್ನ ಕಷ್ಟ ನನಗೆ ಗೊತ್ತು. ನೀವು ಯಾರೇ ಎಷ್ಟೇ ಒತ್ತಾಯ ಮಾಡಿದರೂ ಬರಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಕೇಶವ್ ರವರು ಲಕ್ಷ್ಮಣ ರೇಖೆ ಹಾಕಿ ಬರಬೇಕೆಂದರೂ ಕೂಡ ಬರಲು ಸಾಧ್ಯವಿಲ್ಲ" ಎಂದರು. ಈ ದಾಳಿಯಿಂದ ನಾನು ಸುಧಾರಿಸಿಕೊಳ್ಳಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಂಡೆ. ನಂತರ ಹೆಚ್ಚಿನ ಸದಸ್ಯರ ಜೊತೆ ಈ ವಿಷವನ್ನು ಕೂಲಂಕುಷವಾಗಿ ಚರ್ಚಿಸಿ, ಅವರ ಕಷ್ಟಕ್ಕೆ ಸ್ಪಂದಿಸುವ ದೃಷ್ಟಿಯಿಂದ ಅವರ ಸ್ಥಾನಕ್ಕೆ ಅಲ್ಲಾಬಕಾಷ್ ನ ಹೆಸರನ್ನು ಸೂಚಿಸಿ ಒಪ್ಪಿಗೆಯನ್ನೂ ಪಡೆದುಕೊಂಡು, ಕಿಂಗ್ ಫಿಶರ್ ನ ಹೇಮಾಮಲಿನಿಯ ಸಹಾಯದಿಂದ ರಮೇಶ್ ಜಾಗಕ್ಕೆ ಬಕಾಷ್ ಹೆಸರನ್ನು ಸೇರಿಸಿ, ಬಕಾಷ್ ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸಲಾಯಿತು.

Tuesday, October 18, 2011

ರಾಮೋಜಿ ಫಿಲ್ಮ್ ಸಿಟಿ

ರಾಮೋಜಿಗೆ ಭೇಟಿ - ಗ್ಯಾರಂಟಿ


ಈ ಎಲ್ಲಾ ಬೆಳವಣಿಗೆಯ ನಂತರ ನಾವುಗಳು ರಾಮೋಜಿ ಫಿಲ್ಮ್ ಸಿಟಿ ವೀಕ್ಷಣೆಯ ದಿನಾಂಕ ದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದೆವು. ನಮ್ಮ ಈ ಹಿಂದಿನ ವೇಳಾಪಟ್ಟಿ ಪ್ರಕಾರ ದಿ.೦೬-೧೦-೨೦೧೧ ರಂದು ರಾಮೋಜಿ ಗೆ ಭೇಟಿ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಈಗಿನ ಬೆಳವಣಿಗೆಯಲ್ಲಿ ಸದಸ್ಯರನೇಕರಿಂದ ಬಂದ ವಿಷಯವೇನೆಂದರೆ ಕೆಲವಷ್ಟು ವೀಕ್ಷಣೀಯ ಸ್ಥಳಗಳಿಗೆ ಶುಕ್ರವಾರದಂದು ರಜೆ ಇರುವುದರಿಂದ ಆ ಸ್ಥಳಗಳಿಗೆ ಗುರುವಾರವೇ ಭೇಟಿ ನೀಡಿ ಶುಕ್ರವಾರದಂದು ರಾಮೋಜಿ ಫಿಲ್ಮ್ ಸಿಟಿ ಗೆ ಭೇಟಿ ಕೊಡಬಹುದು ಎಂಬುದು. ಇದರ ಕುರಿತಾಗಿ ಸಾಕಷ್ಟು ಚರ್ಚೆ, ವಾದ-ವಿವಾದ ದ ನಂತರ ಸಹಮತಕ್ಕೆ ಬಂದ ನಾವು, ಶುಕ್ರವಾರದಂದು ರಜೆಯ ನಿಮಿತ್ತ ಬಂದ್ ಆಗಿರುವ ಸ್ಥಳಗಳನ್ನು ಶನಿವಾರ ವೀಕ್ಷಿಸಬಹುದು ಆದ್ದರಿಂದ ರಾಮೋಜಿ ಫಿಲ್ಮ್ ಸಿಟಿಗೆ ಗುರುವಾರವೇ (ದಿ.೦೬.೧೦.೨೦೧೧) ಭೇಟಿ ಕೊಡೋಣ ಎಂದು. ಇದರ ಹೊರತಾಗಿಯೂ ೩೨ ಸದಸ್ಯರ ತಂಡದಲ್ಲಿ ತೆರಳುತ್ತಿರುವ ನಮಗೆ ರಾಮೋಜಿ ಫಿಲ್ಮ್ ಸಿಟಿ ಯ ಪ್ರವೇಶ ದರದಲ್ಲಿ ರಿಯಾಯಿತಿ ಏನಾದರೂ ಸಿಗುವುದೇನೋ ಎಂಬುದರ ಬಗ್ಗೆ ಸಾಕಷ್ಟು ವಿಚಾರಣೆ ಮಾಡಿದಾಗ ತಿಳಿದ ವಿಚಾರವೆಂದರೆ, ಇದರಲ್ಲಿ ನಮಗೇನೂ ರಿಯಾಯಿತಿ ಇಲ್ಲ ಎಂದು. ಆದ್ದರಿಂದ ಆ ಕೂಡಲೇ ನಾನು ಆನ್ ಲೈನ್ ಮೂಲಕ ೩೨ ಸದಸ್ಯರ ಗುಂಪಿನ ಟಿಕೆಟ್ ಅನ್ನು ಬುಕ್ ಮಾಡಿದೆ. ಇದರೊಂದಿಗೆ ನಮ್ಮ ಹೈದರಾಬಾದ್ ಪ್ರವಾಸದ ವೇಳಾ ಪಟ್ಟಿಯಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಭೇಟಿಯ ದಿನಾಂಕ ಖಾಯಂಗೊಂಡಿತು.

Thursday, August 25, 2011

ವಾಸ - ವೆತ್ಯಾಸ

ವಾಸಸ್ಥಾನದಲ್ಲಿ ವೆತ್ಯಾಸ
ದಿನಾಂಕ ೦೬.೦೮.೨೦೧೧ ರಂದು ಸುಮಾರು ೧೧ ರಿಂದ ೧೨ ಘಂಟೆಗಳೊಳಗೆ ರಮೇಶ್, ಷಣ್ಮುಖ್ ಮತ್ತು ಪ್ರಸಾದ್ ರವರುಗಳು ಹಿಂದಿನ ದಿನ ಸಂಪರ್ಕಿಸಿದ್ದ ಲಾಡ್ಜ್ ನ ಸಿಂಬ್ಬಂಧಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಈ ಹಿಂದೆ ನಾವು ಲಾಡ್ಜ್ ನವರಲ್ಲಿ ಕೇಳಿದ್ದು ೧೧ ಕೊಠಡಿ ಅದಕ್ಕಾಗಿ ಅವರು ಕೇಳಿದ್ದು ಶೇ.೭೫ ರಷ್ಟು ಮುಂಗಡ ಹಣ. ನಾವು ಅದಕ್ಕೆ ಕೊಟ್ಟಿದ್ದ ಉತ್ತರ ನಾವುಗಳು ಶೇ.೫೦ ರಷ್ಟು ಹಣವನ್ನು ಮುಂಗಡ ಹಣವನ್ನಾಗಿ ನೀಡಲು ಸಿದ್ಧ ಎಂದು. ಆದರೆ ಇಂದು ಅವರು ಹೇಳಿದ್ದು "ನಾವು ೧೧ ಕೊಠಡಿಗಳನ್ನು ನಿಮಗೆ ಬುಕ್ ಮಾಡಲು ಸಾಧ್ಯವಿಲ್ಲ. ನಾವು ಕೇವಲ ೫ / ೬ ಕೊಠಡಿಗಳನ್ನು ನಿಮಗೆ ನೀಡಬಹುದು" ಎಂದು. ಇದರಿಂದ ನಾವುಗಳು ಅವರ ಜೊತೆ ವ್ಯವಹಾರ ಮುಂದುವರಿಸದೆ ಅಲ್ಲಿಗೇ ಮುಕ್ತಾಯ ಮಾಡಿದೆವು. ನಂತರ ಷಣ್ಮುಖ್ ಕಾಚಿಗುಡ ರೈಲ್ವೇ ನಿಲ್ದಾಣದ ಸಮೀಪದಲ್ಲೇ ಇರುವ ಮತ್ತೊಂದು ಲಾಡ್ಜ್ ಆದ "ನಂದ್ ಇಂಟರ್ನ್ಯಾಷನಲ್" ಕುರಿತು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹ ಮಾಡಿ, ಅದರ ಕುರಿತು ರಮೇಶ್, ಪ್ರಸಾದ್ ಮತ್ತು ವಿಕಾಸ್ ಜೊತೆ ಚರ್ಚಿಸಿ ಅಲ್ಲಿಯೇ ವಸತಿ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದರು. ನಂದ್ ಇಂಟರ್ನ್ಯಾಷನಲ್ ನಲ್ಲಿ ೧೦ ಡಬ್ಬಲ್ ಏರ್ ಕೂಲರ್ ರೂಮ್, ೧ ಸುಪೀರಿಯರ್ ರೂಮ್ (ಗಾಯಕ್ವಾಡ್ ಕುಟುಂಬಕ್ಕೆ) ಮತ್ತು ೧ ಎ.ಸಿ.ರೂಮ್ (ವಿಕಾಸ್ ರವರಿಗಾಗಿ) ಅನ್ನು ಬುಕ್ ಮಾಡುವ ಮತ್ತು ಕೊಡಬೇಕಾಗಿರುವ ಮುಂಗಡ ಹಣದ ಕುರಿತಂತೆ ಅಲ್ಲಿನ ಸಿಬ್ಬಂಧಿ ಪ್ರಿಯಾ ರವರೊಡನೆ ಮಾತುಕತೆ ನಡೆಯಿತು. ಅವರು ನಮ್ಮ ಮೂರು ದಿನದ ವಸತಿ ವ್ಯವಸ್ಥೆಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆಯೇ ಮಾಡಿಕೊಡುವುದಾಗಿಯೂ ಅದಕ್ಕಾಗಿ ನಾವುಗಳು ಯಾವುದೇ ಮುಂಗಡಹಣ ನೀಡಬೇಕಿಲ್ಲವೆಂದೂ ತಿಳಿಸಿದರು. ಆದರೂ ನಾವುಗಳು ಮುಂಗಡವಾಗಿ ಹಣ ನೀಡುವುದು ಸೌಖ್ಯ ಎಂದು ತೀರ್ಮಾನಿಸಿ ಮತ್ತೆ ಪ್ರಿಯ ಅವರನ್ನು ಸಂಪರ್ಕಿಸಿ ಅವರಿಗೆ ನಾವು ಮುಂಗಡವಾಗಿ ನೀಡಬಯಸಿರುವ ಹಣದ ಕುರಿತು ವಿವರಣೆ ನೀಡಿ ಅವರಿಂದ ಅವರ ಬ್ಯಾಂಕಿನ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು ಮತ್ತಿತರ ವಿವರವನ್ನು ದಿ.೦೬.೦೮.೨೦೧೧ ರಂದು ಸಂಗ್ರಹಿಸಿ. ಹಣವನ್ನು ಅವರ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗೆ ನೇರವಾಗಿ ತುಮಕೂರಿನ ಖಾತೆಯಿಂದಲೇ ಹಣ ತುಂಬುವುದೆಂದು ಮತ್ತು ಅದಕ್ಕಾಗಿ ಮುರಳಿಯವರು ನಮಗೆ ನೀಡುತ್ತೇನೆಂದು ಹೇಳಿದ್ದ ರೂ.೧೦,೦೦೦/- ವನ್ನು ನೇರವಾಗಿ ವಸತಿ ಸೌಕರ್ಯಕ್ಕೆ ಬಳಸಿಕೊಳ್ಳುವುದೆಂದು ತೀರ್ಮಾನಿಸಿ ನಾನು ಮತ್ತು ರಮೇಶ್ ರವರು ದಿ. ೦೭ ಮತ್ತು ೦೮ ರಂದು ಗದಗ್ ನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಹೋಗಬೇಕಾಗಿದ್ದರಿಂದ ಆ ಕಾರ್ಯವನ್ನು ಷಣ್ಮುಖ್ ಮನಃ ಪೂರ್ವಕವಾಗಿ ವಹಿಸಿಕೊಂಡರು. ಸೋಮವಾರ ದಿ.೦೮.೮.೨೦೧೧ ರಂದು ಬೆಳೆಗ್ಗೆ ಸುಮಾರು ೧೦.೩೦ ಕ್ಕೆ ನಾನು ಮತ್ತು ರಮೇಶ್ ಗದಗ್ ನಲ್ಲಿ ಇದ್ದಾಗ ಫೋನ್ ಮಾಡಿದ ಷಣ್ಮುಖ್, ಹೋಟೆಲ್ ನ ಬ್ಯಾಂಕ್ ಖಾತೆಗೆ ನೇರವಾಗಿ ಇಲ್ಲಿಂದಲೇ ಹಣ ತುಂಬುವುದಕ್ಕಿಂತ ಮಲ್ಟಿಸಿಟಿ ಚೆಕ್ ಅನ್ನು ಅವರಿಗೆ ಕೊರಿಯರ್ ಮೂಲಕ ಕಳುಹಿಸುವುದು ಹೆಚ್ಚು ಸೂಕ್ತ ಮತ್ತು ಸುರಕ್ಷಿತ ಎಂದು ನಮಗೆ ಮನವರಿಕೆ ಮಾಡಿಕೊಟ್ಟರು. ಅದಕ್ಕಾಗಿ ಮುರಳಿಯವರು ನಮಗೆ ಕೊಡುತ್ತೇನೆಂದು ಹೇಳಿದ್ದ ಮೊತ್ತದ (ರೂ. ೧೦,೦೦೦/-) ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯ ಚೆಕ್ (ಸಂಖ್ಯೆ: ೦೪೯೪೫೦) ಅನ್ನು "ನಂದ್ ಇಂಟರ್ನ್ಯಾಷನಲ್" ಹೆಸರಿಗೆ ಬರೆದು ಕಳುಹಿಸಿದರು. ದಿ. ೧೦.೦೮.೨೦೧೧ ರಂದು ಪ್ರಿಯಾ ಅವರಿಂದ ನಾವು ಕಳುಹಿಸಿದ ಚೆಕ್ ಅವರಿಗೆ ತಲುಪಿದ ಬಗ್ಗೆ ಮತ್ತು ನಮ್ಮ ವಸತಿ ವ್ಯವಸ್ಥೆ ಖಾಯಂಗೊಂಡಿರುವ ಬಗ್ಗೆ ಫೋನ್ ಮಾಡಿ ತಿಳಿಸುವುದರ ಮೂಲಕ ನಾವು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಮಾಡಿದರು.