ಚಿತ್ರ ವೀಕ್ಷಣೆಯ ನಂತರ ಎಲ್ಲರೂ ಮತ್ತೊಮ್ಮೆ ನಿದ್ದೆಗೆ ಶರಣಾದರು. ಮಳೆಯ ರಭಸ ಮಾತ್ರ ಕಮ್ಮಿಯಾಗಿರಲಿಲ್ಲ. ಅಷ್ಟರಲ್ಲಿ ಸಮಯ ಸಂಜೆ 5 ಘಂಟೆಯಾಗಿತ್ತು. ಆಗ ನಾವು ಜೋಗದ ಪ್ರವೇಶ ಮಾಡಿದೆವು. ಇಲ್ಲಿ ಮಳೆಯ ರಭಸ ಸ್ವಲ್ಪ ಕಮ್ಮಿಯಾಗಿತ್ತು. ಆದರೆ ಜಿಟಿ ಜಿಟಿ ಮಳೆ ಇದ್ದೇ ಇತ್ತು. ನಾವೆಲ್ಲರೂ ಈ ಮುಂದೆ ಅಂದುಕೊಂಡಿದ್ದಂತೆ ಜಲಪಾತದ ವೀಕ್ಷಣೆ ಸಾಧ್ಯವಾಗಲಿಲ್ಲ. ಜಲಪಾತದ ಮುಂದೆಲ್ಲ ಮಂಜು ಮುಸುಕಿದ ವಾತಾವರಣ. ಎಲ್ಲರಿಗೂ ನಿರಾಸೆ...
ನಿರಾಸೆಯಿಂದಲೇ ಅಲ್ಲಿಂದ ಬೇಗನೇ ಹೊರಟ ನಾವುಗಳು ಶಿವಮೊಗ್ಗ ದಲ್ಲಿನ ಹೋಟೇಲ್ ಒಂದರಲ್ಲಿ ಟೀ ಕುಡಿದು ಲಗುಬಗೆಯಿಂದ ಹೊರಟೆವು. ಆಗಲೇ ಸಹನಾ ಸಂಪೂರ್ಣ ಚೇತರಿಸಿಕೊಂಡಿದ್ದಳು. ಅಲ್ಲಿಂದ ನಾವು ತುಮಕೂರಿನೆಡೆಗೆ ಪ್ರಯಾಣ ಪ್ರಾರಂಭಿಸಿದಾಗ ಸಮಯ ಸಂಜೆ 6 ರನ್ನು ದಾಟಿತ್ತು. ಪ್ರಯಾಣದ ನಡುವೆ ಮನರಂಜನೆಗಾಗಿ ಅಂತ್ಯಾಕ್ಷರಿ ಪ್ರಾರಂಭಿಸಿದೆವು. ಇದು ಸಾಕಷ್ಟು ಹೊತ್ತು ನಡೆಯಿತು. ಜೊತೆಗೆ ಉಮಾ ಮೇಡಮ್ ರವರು ಎಲ್ಲರನ್ನೂ ಸಾಕಷ್ಟು ರಂಜಿಸಿದರು. ಈ ಮಧ್ಯೆ ಒಬ್ಬೊಬ್ಬೊರಾಗಿ ನಿದ್ರೆಗೆ ಜಾರತೊಡಗಿದರು. ರಾತ್ರಿ ಸುಮಾರು 9.30 ರ ಸುಮಾರಿನಲ್ಲಿ ಕಡೂರಿನ ರಸ್ತೆ ಬದಿಯ ಹೋಟೇಲ್ ನಲ್ಲಿ ರಾತ್ರಿ ಊಟ ಮಾಡಿ ಕಡೂರಿನಿಂದ ಹೊರಡುವ ವೇಳೆಗೆ ಸಮಯ 10.30 ಆಗಿತ್ತು. ಪ್ರಯಾಣ ಮಧ್ಯದಲ್ಲಿ ಮತ್ತೇನು ಕಾರ್ಯಕ್ರಮಗಳು ನಡೆಯದೆ ಎಲ್ಲರೂ ನಿದ್ರೆಗೆ ಜಾರಿದರು. ರಾತ್ರಿ ಸುಮಾರು 11.45ರ ಸುಮಾರಿನಲ್ಲಿ ನಾವು ಗುಬ್ಬಿ ಪ್ರವೇಶಿಸಿದೆವು. ಷಣ್ಮುಖ್ ದಂಪತಿಗಳು ಅಲ್ಲೇ ಇಳಿದುಕೊಂಡರು. ನಂತರ ಪ್ರೀತಿ ಗೌರ್ಮೆಂಟ್ ಕಾಲೇಜ್ ಬಳಿ ಇಳಿದುಕೊಂಡಳು. ಅವಳಿಗಾಗಿ ಅವಳ ತಂದೆಯವರಾದ ಶ್ರೀ.ವಾದಿರಾಜನ್ ಪೊಟ್ಟಿ ಯವರು ಕಾರಿನಲ್ಲಿ ಕಾಯುತ್ತಿದ್ದರು. ಹೀಗೆಯೇ ಪ್ರತಿಯೊಬ್ಬರೂ ಅವರವರ ಮನೆಯ ಸಮೀಪದಲ್ಲೇ ಇಳಿದುಕೊಂಡರು. ಕಡೆಯದಾಗಿ ನಾನು ಮತ್ತು ಸಹನಾ ನಮ್ಮ ಮನೆಯ ಬಳಿ ಇಳಿದುಕೊಳ್ಳುವ ಹೊತ್ತಿಗೆ ಸಮಯ 12.30 ಆಗಿತ್ತು. ಇಳಿದುಕೊಳ್ಳುವ ಮೊದಲು ನಾನು ಮೀಟರ್ ರೀಡಿಂಗ್ ಅನ್ನು ಗುರುತು ಹಾಕಿಕೊಂಡು. ಮನೆ ಪ್ರವೇಶಿಸುವ ಹೊತ್ತಿಗೆ ಸಮಯ ರಾತ್ರಿ 1 ಆಗಿತ್ತು.
ಇದರೊಂದಿಗೆ ನಮ್ಮ ಈ ವರ್ಷದ ಗೋವಾ ಪ್ರವಾಸ ಸುಖಾಂತ್ಯಗೊಂಡಿತು.